Saturday, January 8, 2011

ಹಸಿದ ಕಂದನ ಒಡಲ ತುಡಿತ

ರಾಮಯ್ಯನವರು ಬಂದರು.. ತಮ್ಮ ಪದ್ಯಗಳನ್ನು ಓದಿದರು. ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದ ತಮ್ಮೆದೆಯಲ್ಲಿ ಕಾಪಿಟ್ಟುಕೊಂಡಿದ್ದ ಕಾವ್ಯದ ಜಲಧಾರೆ ಹರಿಸಿದರು. ಅವರ ಕಾವ್ಯ ದಲಿತ ಸಂಘರ್ಷ ಸಮಿತಿಯ ಹುಟ್ಟು, ಬೆಳವಣಿಗೆ, ಮೂರ್ನಾಲ್ಕು ದಶಕಗಳ ಕನ್ನಡ ಜನತೆಯ ಪ್ರತಿಸ್ಪಂಧನ, ಸಮಕಾಲೀನ ತಲ್ಲಣಗಳು, ಅದರೆದುರಿಗೆ ನಾವು ಕಂಡುಕೊಳ್ಳಬೇಕಾದ ಜಾಡು.. ಹೀಗೆ.. ಸಿಟ್ಟಾಗಿ, ಬೆಂಕಿಯಾಗಿ, ನೀರಾಗಿ, ಹಸಿದ ಕಂದನ ಒಡಲ ತುಡಿತವಾಗಿ.. ಕಂದನಿಂದ ದೂರವಾದ ತಾಯಿಯ ಎದೆಜಿನುಗಾಗಿ.. ಅವರ ಕಾವ್ಯ ರೂಪು ಪಡೆಯುತ್ತಿದ್ದರೆ, ಇದಕ್ಕೆ ಸಾಕ್ಷಿಯಾಗಿದ್ದ ಅರವತ್ತೈದು-ಎಪ್ಪತ್ತು ಎದೆಗಳಲ್ಲಿ.. ತಾವು ಉಂಡ ಅನ್ನದ ಹಿಂದಿನ ಬೆವರಿನ, ಆ ಬೆವರ ನೆತ್ತರ- ಅತ್ತರಿನ ಲೆಕ್ಕಾಚಾರ..

'ಎಲ್ಲಿದ್ದಾರೆ ಬೇಂದ್ರೆ..?' ಎಂಬ ಪದ್ಯದಿಂದ ಆರಂಭವಾದ ಈ ಕಾವ್ಯಧಾರೆ, ಕೂಡಲ ಸಂಗಮ, ಸಮಕಾಲೀನ ಅಕ್ಷರ ರಾಜಕಾರಣ, ಅನ್ನದ ರಾಜಕಾರಣ, ಯೂನಿವರ್ಸಿಟಿ, ಅಕ್ಯಾಡೆಮಿಕ್ ಅತಂತ್ರತೆ, ದಲಿತ ಸಂಸ್ಕೃತಿಯ ವಿಸ್ಮೃತಿಯ ನೆಲೆ, ಆಂದ್ರದ ನಕ್ಸಲೀಯ ಚಳವಳಿಯ ಮುಗ್ಗುರಿಕೆ, ಉತ್ತರ ಕರ್ನಾಟಕದ ದಲಿತ ಹೆಣ್ಣುಮಕ್ಕಳ ಬಾಳ ಬೆಳೆಕಿನ ಕಗ್ಗೊಲೆ.. ಎಲ್ಲವೂ, ಎಲ್ಲವು... ಪದ್ಯದ ವಸ್ತುಗಳೇ.. ಪದ್ಯ ಕೇಳಿ ಗಂಟಲು ಒಣಗಿದ್ದ ಕಾವ್ಯಾಸಕ್ತರಿಗೆ ಈಗ ಸಮಕಾಲೀನ ಭೀಕರ ತಲ್ಲಣಗಳನ್ನು ಎದುರಿಸಲು ಯಾರು ಏನು ಮಾಡುತ್ತಿದ್ದೀರಿ..? ಎಂಬ ಚಾಟಿ ಬೀಸು...


ಒಟ್ಟು ನಾಲ್ಕು ಕಾಲು ಗಂಟೆಗಳ ಈ ಕಾವ್ಯ ಜಿಜ್ಞಾಸೆ ಕನ್ನಡ ಕಾವ್ಯ ವಾಚನ ಸಂಸ್ಕೃತಿಗೆ, ಆ ಕುರಿತ ಜಿಜ್ಞಾಸೆಗೆ ಏನನ್ನೋ ಕೂಗಿ ಹೇಳುವಂತಿತ್ತು.. ಎಲ್ಲರಿಗೂ ಕೇಳಿಸೀತೆ..?

'ಬಯಲು ಬಳಗ'ಕ್ಕೆ ಇಂಥ ಒಂದು ಕಾರ್ಯಕ್ರಮ ನಡೆಸಿದ್ದಕ್ಕೆ ಧನ್ಯತಾ ಭಾವ. ಇಂಥ ಕಾರ್ಯಕ್ರಮಕ್ಕೆ ನಮಗೆ ಸಹಕರಿಸಿದ ಗುರುಗಳಾದ ಡಾಮ್ನಿಕ್, ಕೆವೈಎನ್ ಅವರಿಗೆ ಧನ್ಯವಾದಗಳು..

Thursday, January 6, 2011

ಎರಡನೇ ಶನಿವಾರದ 'ಬಯಲು' ಸಭೆಗೆ ಬನ್ನಿ

ಕರ್ನಾಟಕದ ದಲಿತಲೋಕದ ಮೂರ್ನಾಲ್ಕು ದಶಕಗಳ ತಲ್ಲಣಗಳನ್ನು ಅಂಗೈಯಲ್ಲಿಟ್ಟುಕೊಂಡು ಪರಿತಪಿಸಿದವರು ಕೋಟಿಗಾನಹಳ್ಳಿ ರಾಮಯ್ಯ. ಈಚಿನ ನಾಲ್ಕು ವರ್ಷಗಳಿಂದ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ತಮ್ಮ 'ಆದಿಮ'ದ ಮೂಲಕ ಹೊಸ ಉಸಿರು ತುಂಬಲು ಹವಣಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಕಲಾತಂಡಗಳು ಹಾಡುವ ಹಾಡುಗಳಿಗೆ ಬೆಳಕಿನ ಬಣ್ಣ ಬಳಿದ ರಾಮಯ್ಯ, ತಮ್ಮ ಅಕ್ಷರಗಳಲ್ಲಿ ಆರ್ದ್ರ ಭಾವನೆಗಳನ್ನು ಬಿಚ್ಚಿಟ್ಟವರು. ಆದಿಮದ ಕೆಲಸಗಳಲ್ಲಿ ಬರೆಯುವುದನ್ನು ಬಿಟ್ಟಿದ್ದ ಅವರು, ಕಳೆದ ಒಂದೆರಡು ತಿಂಗಳಿನಿಂದ ಹೊಸ ಪದ್ಯ ಬರೆಯುತ್ತಿದ್ದಾರೆಂದು ಗುರುಗಳಾದ ಡಾಮ್ನಿಕ್ ಹೇಳಿದಾಗ 'ಬಯಲು ಗೆಳೆಯರೆಲ್ಲ' ಖುಷಿ ಪಟ್ಟೆವು..

ನಮ್ಮ ಎರಡನೇ ಶನಿವಾರದ 'ಬಯಲು' ಸಭೆಗೆ ರಾಮಯ್ಯ ಬರಲು ಒಪ್ಪಿದ್ದಾರೆ.. ತಮ್ಮ ಹೊಸ ಪದ್ಯಗಳೊಂದಿಗೆ.. ನೀವೂ ಬನ್ನಿ..

ನಮ್ಮೊಂದಿಗೆ ಗುರುಗಳಾದ ಕೆ.ವೈ.ನಾರಾಯಣಸ್ವಾಮಿ, ಡಾಮ್ನಿಕ್, ಮಂಜುನಾಥ ಅದ್ದೆ.. ಇರುತ್ತಾರೆ.

08.01.2011 ಶನಿವಾರ ಮಧ್ಯಾನ್ಹ 4 ಗಂಟೆಗೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ..